Tuesday, October 7, 2014

ಸಿದ್ದರಾಮಯ್ಯ ನವರೆ.. ನಿಮ್ಮ ಗಾಂಧಿ ವಾದದ ಬಗ್ಗೆ ತಿಳಿದುಕೊಳ್ಳೋಣಾ?

ಗಾಂಧಿ ಜಯಂತಿ ದಿವಸ ಗಾಂಧಿ ಅವರನ್ನು ಪ್ರಾಮಾಣಿಕವಾಗಿ ನೆನೆಯುವುದನ್ನು ಬಿಟ್ಟು ಬೇರೆಲ್ಲ ವಿಷಯಗಳು ಸುದ್ದಿಯಲ್ಲಿದ್ದವು. ನಮ್ಮ ಸಿದ್ದರಾಮಯ್ಯನವರಂತೂ ತಾವು ರಾಜ್ಯದ ಎಲ್ಲ ೬.೩ ಕೋಟಿ ಜನರ ಮುಖ್ಯಮಂತ್ರಿ ಅನ್ನೋದನ್ನು ಮರೆತು, ತಾವು ಕೇವಲ ಕಾಂಗ್ರೆಸ್ ಪರಿವಾರದ ಮುಖ್ಯಮಂತ್ರಿ ಅನ್ನೋ ಹಾಗೆ ನಡೆದುಕೊಂಡರು.  ಅವರ ಕುಣಿತಕ್ಕೆ ತಾಳ ಹಾಕೋ ಹಾಗೆ, ಖರ್ಗೆ, ಮೊಯ್ಲಿ, ಪರಮೇಶ್ವರ ಮತ್ತಿತರು ಉಘೆ ಉಘೆ ಅಂದರು.

ಅಂದ ಹಾಗೆ ಆಗ ಬಾರದ ಅಚಾತುರ್ಯ ಆಗಿದ್ದಾದ್ರೂ ಏನು?

ಸಿದ್ದರಾಮಯ್ಯನವರಿಗಿಂಥ ೮ ವರ್ಷ ದೊಡ್ಡವರಾದ ಹಿರಿಯ ರಾಜಕಾರಣಿ ಶಂಕರ ಮೂರ್ತಿ ಅವರು, ಸಿದ್ದರಾಮಯ್ಯ ಅವರ ಅರ್ಧ ವಯಸ್ಸಿನ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಗಾಂಧೀಜಿ ಅವರ ಬಗ್ಗೆ ಭಾಷಣ ಮಾಡೋಕೆ ಕರೆದ್ದಿದ್ದು. ಇದು ಯಾವ ಪಕ್ಷದ ಅಥವಾ ಸಿದ್ಧಾಂತದ ಸನ್ನಿವೇಶ ಅಗಿರಲಿಲ್ಲ. ಇದು ಕೇವಲ ಮಹಾತ್ಮ ಗಾಂಧಿ ಅವರ ಆದರ್ಶದ ಬಗೆಗಿನ ಸಮಾರಂಭ. ಸಿದ್ದರಾಮಯ್ಯನವರಿಗೆ ಸಿಕ್ಕಾಪಟ್ಟೆ ಅಲರ್ಜಿ ಆಗಿದ ವಿಷಯ, ಈ ಇಬ್ಬರು ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆಯ ಜೊತೆ ಹೊಂದಿರುವ ಬಾಂಧವ್ಯ!

ನಾನು ಚಕ್ರವರ್ತಿ ಅವರನ್ನು ಬಹಳಷ್ಟು ಸಲ ಭೇಟಿ ಆಗಿದ್ದೇನೆ. ಅವರ ವಾಕ್ ಚಾತುರ್ಯ ನೋಡಿ ಶಭಾಶ್ ಅಂದಿದ್ದೇನೆ. ಅವರ ದೇಶ ಭಕ್ತಿಗೆ ಮೆಚ್ಚಿ ಸಾಮಾಜಿಕ ತಾಣದಲ್ಲಿ ಬರೆದಿದ್ದೇನೆ. ಅವರಿಗೆ ನನ್ನಂತಹ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಚಕ್ರವರ್ತಿ ಅವರು ಜಾಗೋ ಭಾರತ್ ಅಂಥಹ ೨೪ ಕಾರೆಟ್ ಚಿನ್ನದಂಥ ಕಾರ್ಯಕ್ರಮ ಮಾಡಿ, ಹಳ್ಳಿ ಹಳ್ಳಿಗಳಲ್ಲಿ ಭಾರತದ ಮತ್ತು ಭಾರತೀಯ ಸೈನಿಕರ ಬಗ್ಗೆ ಹೆಮ್ಮೆಯ ಅಭಿಪ್ರಾಯ ಬಾರೋ ಹಾಗೆ ನೋಡಿ ಕೊಂಡಿದ್ದಾರೆ. ಇಂಥಹ ಭಾರತ ಮಾತೆಯ ಹೆಮ್ಮೆಯ ಪುತ್ರನಿಗೆ ಏಕ ವಚನ ಉಪಯೋಗಿಸಿದ್ದು ಪರಮಾಶ್ಚರ್ಯ! ಹೋಗಲಿ ಬಿಡಿ.. ಶಂಕರ ಮೂರ್ತಿ ಮತ್ತು ಚಕ್ರವರ್ತಿ ಸೂಲಿಬೆಲೆ ಅವರಿಗೆ, ಸಮಾಜದಲ್ಲಿ ಅವರದ್ದೇ ಗೌರವ ಮತ್ತು ಸ್ಥಾನ ಇದೆ. ಅವರೇನು ಈ ಮುಖ್ಯಮಂತ್ರಿಯಿಂದ ಪ್ರಮಾಣಪತ್ರ ಪಡೆಯೋಕೆ ಹೋಗಿರಲಿಲ್ಲ.

ಇಷ್ಟಕ್ಕೂ ಬಹಳ ಜೋರಾಗಿ "ಗಾಂಧಿ ಪರ" ಕೂಗಾಡಿದ ಸಿದ್ದರಾಮಯ್ಯನವರು ಎಷ್ಟು ಮಟ್ಟಕ್ಕೆ ಗಾಂಧಿ ತತ್ತ್ವ ಮತ್ತು ಸಂದೇಶ ಖುದ್ದಾಗಿ ಪಾಲಿಸುತ್ತಿದ್ದಾರೆಂದು ಸ್ವಲ್ಪ ನೋಡೋಣ. ನವರಾತ್ರಿ ಸಮಯ ಆದದ್ದರಿಂದ ಒಂಭತ್ತು ಬಹಳ ಪ್ರಚಲಿತದಲ್ಲಿರುವ ಸಂಖ್ಯೆ. ಆದ್ದರಿಂದ ಒಂಭತ್ತು ವಿಷಯಗಳ ಬಗ್ಗೆ ಗಮನ ಹರಿಸೋಣ.

೧) ಮೊದಲನೆಯದಾಗಿ, ಗಾಂಧಿ ಅವರು ಸಸ್ಯಾಹಾರಕ್ಕೆ ಬಹಳ ದೊಡ್ಡ ಪ್ರಾಮುಖ್ಯತೆ ಕೊಟ್ಟಿದ್ದರು. ಅಹಿಂಸೆ ಗಾಂಧಿ ಅವರ ಪರಮಧರ್ಮ ಆಗಿತ್ತು. ಪ್ರಾಣಿ ಹಿಂಸೆ ಮಾಡಬೇಡಿ ಅಂತ ಅವರು ಬೋಧನೆ ಮಾಡುತ್ತಿದ್ದರು.
ಆದರೆ ನೀವು ಸಿದ್ದರಾಮಯ್ಯ ಅವರೆ.. ಮೊದಲ ತಿಂಗಳಲ್ಲೇ, ಗೋ ಹತ್ಯೆ ನಿಷೇಧ ಕಾನೂನನ್ನು ತಿರಸ್ಕಾರ ಮಾಡಿ, ಕರ್ನಾಟಕದಲ್ಲಿ ಭಾರಿ ಪ್ರಮಾಣದಲ್ಲಿ ಹಾಲು ಕೊಡದ ಹಸುಗಳು, ಕರುಗಳು, ಎಮ್ಮೆಗಳು, ಎತ್ತುಗಳು, ಕೋಣಗಳ ಮಾರಣಹೋಮ ಮಾಡಲು ಅನುಮತಿ ನೀಡಿದ್ದೀರಿ. ಇದು ನಿಮ್ಮ ಗಾಂಧೀವಾದವೋ?

೨) ಮಹಾತ್ಮ ಗಾಂಧಿಯವರ ಜೀವನ ಪರ್ಯಂತ ಅವರು ಜಾತಿ ಮತ್ತು ಮತಗಳ ನಡುವೆ ಸಂಘರ್ಷ ತಡೆಯುವದರ ಪ್ರಯತ್ನ ಮಾಡಿದ್ದರು.
ಆದರೆ ನೀವು? ಬೇರೆಯವರನ್ನು ಕೋಮುವಾದಿ, ಜಾತಿವಾದಿ ಅಂತೆಲ್ಲ ಜರಿದು, ಖುದ್ದಾಗಿ ಬರೇ ಜಾತಿ ಮತ್ತು ಕೋಮು ಯೋಜನೆಗಳನ್ನೇ ತಂದು ಸಮಾಜವನ್ನು ಒಡೆಯುವ ಪ್ರಯತ್ನದಲ್ಲಿ ಇದ್ದೀರ. ಶಾದಿ ಭಾಗ್ಯ ಅಂತ ತಂದು ಮುಸಲ್ಮಾನರ ಬಗ್ಗೆ ಹಿಂದುಗಳಿಗೆ ತಾತ್ಸಾರ ಬಿತ್ತಿದ್ದೀರ. ಅಹಿಂದ ಮಕ್ಕಳ ಪ್ರವಾಸ ಅಂತ ಬೇರೆ ಜಾತಿ ಮಕ್ಕಳಿಗೆ ಅನ್ಯಾಯ ಮಾಡಿ, ಶಾಲೆಯಲ್ಲೇ ಮಕ್ಕಳ ಹಸಿ ಮನಸ್ಸನ್ನು ಜಾತಿ ವಿಷದಿಂದ ತುಂಬುತ್ತಿದ್ದೀರ. ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್ ಅಂತ ಹೇಳಿ, "ಮೇಲ್ಜಾತಿ" ಹುಡುಗಿಯರನ್ನು ಹೊರಗಿಟ್ಟು ಅವರಿಗೆ ಅನ್ಯಾಯ ಮಾಡುತ್ತಿದ್ದೀರ. ಯಾರಾದರೂ ಇವುಗಳ ಬಗ್ಗೆ ಮಾತಾಡಿದರೆ, ಅವರನ್ನು ದಲಿತ ವಿರೋಧಿ, ಹಿಂದುಳಿದವರ ವಿರೋಧಿ, ಮುಸಲ್ಮಾನ ವಿರೋಧಿ ಅಂತ ಕೂಗಿ ಬಾಯಿ ಮುಚ್ಚುಸ್ತೀರ.  ಇವೆಲ್ಲ, ಗಾಂಧೀ ವಾದವೋ?

೩) ಗಾಂಧಿ ದೇಶದ ಸಂಪತ್ತನ್ನು ಲೂಟಿ ಹೊಡೆಯೋರ ವಿರುದ್ಧ ನಿಂತಿದ್ರು.
ನೀವು? ದೊಡ್ಡ ಭ್ರಷ್ಟಾಚಾರ ಆರೋಪ ಇರುವ ಸಂತೋಷ್ ಲಾಡ್ ಅವರನ್ನು ಮಂತ್ರಿ ಮಾಡಿದ್ದ್ರಿ. ನಂತರ ಬಹಳ ಜನರಿಂದ ಕಿವಿ ಹಿಂಡಿಸಿಕೊಂಡ ಮೇಲೆ ಅವರನ್ನು ಬಿಟ್ಟು, ಅವರಿಗಿಂತ ಗುರುತರ ಆರೋಪ ಇರುವ ಶಿವ ಕುಮಾರ್  ಮತ್ತು ರೋಶನ್ ಬೇಗ್ ಅವರನ್ನು ಮಂತ್ರಿ ಮಾಡಿದ್ರಿ. ನಿಮ್ಮ ಮೇಲೆ ಖುದ್ದಾಗಿ ಅರ್ಕಾವತಿ de notification ಆರೋಪ ಇದ್ರೂ, ಅದನ್ನೆಲ್ಲ ನಿರ್ಲಕ್ಷ್ಯ ಮಾಡಿ, ಬೇರೆಯವರನ್ನು ಭ್ರಷ್ಟರೆಂದು ಕರೆಯುತ್ತೀರ. ಇದು ಗಾಂಧಿವಾದವೋ ?

೪) ಗಾಂಧಿ ಎಂಥ ಸನ್ನಿವೇಶದಲ್ಲೂ ಕೂಡ ಒಬ್ಬರ ಮೇಲೆ ಕೈ ಮಾಡದ ಅಹಿಂಸಾವಾದಿ.
ಆದರೆ ನಿಮ್ಮ ಸುತ್ತ ಇರೋ ಜನ? ಭೈರಥಿ ಅವರು ಪೋಲಿಸ್ ಮೇಲೆ ಹಲ್ಲೆ ಮಾಡಿದ್ರು ಅಂತ ನಾವು ಒದಿದ್ವಿ. ಅಭಯಚಂದ್ರ ಜೈನ್ ಅವರು ಆಟೋ ಚಾಲಕನ ಮೇಲೆ ಹಲ್ಲೆ ಮಾಡೋಕೆ ಹೋದರು ಅಂತ ಟಿವಿನಲ್ಲಿ ನೋಡಿದ್ವಿ. ಇದೇ ಜೈನ್ ಅವರು ಒಬ್ಬ ಕರಾವಳಿ ಪತ್ರಕರ್ತನಿಗೆ ಜೀವ ಬೆದರಿಕೆ ಹಾಕಿದರು ಅಂತ ಕೂಡ ಕೇಳಿದ್ವಿ. ವಿನಯ್ ಕುಲಕರ್ಣಿ ಅವರು ಒಬ್ಬ ವೈದ್ಯಾಧಿಕಾರಿಗಳಿಗೆ ಸಿನಿಮಾ ರೀತಿ ಹೊಟ್ಟೆಗೆ ಪಂಚ್ ಮಾಡಿದ್ದನ್ನು ಟಿವಿನಲ್ಲಿ ನೋಡಿದ್ವಿ. ಇವರಲ್ಲಿ ಯಾರದ್ರಿಗೂ ನೀವು ಶಿಕ್ಷೆ ಕೊಟ್ಟರಾ? ಇದು ನಿಮ್ಮ ಗಾಂಧೀವಾದವೋ?

೫) ಮಹಾತ್ಮಾ ಗಾಂಧಿ ಅವರು ಭಗವದ್ ಗೀತೆ ಮತ್ತು ರಾಮಾಯಣದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡವರು.
ಎಲ್ಲಿ ನಿಮ್ಮ ಭಾಷಣಗಳಲ್ಲಿ ಎಲ್ಲಾದರೂ ಕೃಷ್ಣ ಅಥವಾ ರಾಮನ ಆದರ್ಶದ ಬಗ್ಗೆ ಉಲ್ಲೇಖ ಇದೆಯೋ? ನಾವಂತೂ ಕಂಡಿಲ್ಲ. ಆದರೆ, ನೀವು ಜರಿಯುವ ಸಂಘ ಪರಿವಾರದ ಮೋದಿ ಅವರ ಭಾಷಣಗಳಲ್ಲಿ ಬೇಕಾದಷ್ಟು ಭಾರತೀಯ ನೀತಿ ಬೋಧನೆ ಕೇಳಿದ್ದೇವೆ!

೬) ಗಾಂಧಿ ಅವರು ಮಾತಿನ ಬಗ್ಗೆ ಬಹಳ ಗಮನ ಕೊಡುತ್ತಿದ್ದರು. ಅಪ್ಪಿ ತಪ್ಪಿಯು ಇನ್ನೊಬ್ಬರ ಬಗ್ಗೆ ಸುಳ್ಳು ಆಪಾದನೆಯಾಗಲಿ, ಕೀಳು ಟೀಕೆಗಳಾಗಲಿ ಮಾಡಿದವರಲ್ಲ.
ಆದರೆ ನೀವು? ೨೦೧೪ ನೇ ಚುನಾವಣೆಯಲ್ಲಿ, ದೇಶದ ಸರ್ವೋಚ್ಚ ನ್ಯಾಯಾಲಯದ SITಯಿಂದ ಕ್ಲೀನ್ ಚಿಟ್ ಪಡೆದುಕೊಂಡ ನರೇಂದ್ರ ಮೋದಿ ವಿರುದ್ಧ ನರಹಂತಕ ಅಂತ ಅಪಪ್ರಚಾರ ಮಾಡಿ, ಚುನಾವಣಾ ಆಯೋಗದಿಂದ ಛೀಮಾರಿ ಹಾಕಿಸಿಕೊಂಡ ದೇಶದ ಏಕೈಕ ಮುಖ್ಯ ಮಂತ್ರಿ! ಅದು ನಿಮ್ಮ ಗಾಂಧೀ ವಾದವೋ?

೭) ಗಾಂಧಿ ಅವರು ಎಂದೆಂದೂ ಸಾರಾಯಿ ಮತ್ತು ಇತರ ಆಲ್ಕೋಹಾಲ್ನಿಂದ ದೂರ ಇದ್ದರು.
ಆದರೆ ನಿಮ್ಮ ಸುತ್ತ? ಕಾಶಪ್ಪನವರ್ ಅಂಥ ಕುಡಿತದ ಬಾರ್ ನಲ್ಲಿ ಪೋಲಿಸ್ ಮೇಲೆ ಹಲ್ಲೆ ಆರೋಪ ಇರುವ ಪಕ್ಷದ ಸದಸ್ಯರಿದ್ದಾರೆ. ಅವರ ಮೇಲೆ ಏನು ಕ್ರಮ ತೊಗೊಂಡಿದ್ದೀರ?
ನೀವು ನಿಮ್ಮ ಸರ್ಕಾರದಿಂದ ಕುಡಿತದ ಹಾವಳಿ ಕಡಿಮೆ ಮಾಡಲು ಏನು ಕ್ರಮ ತೆಗೆದು ಕೊಂಡಿದ್ದೀರ?

೮) ಗಾಂಧಿ ಅವರಿಗೆ ಸರ್ವಾಧಿಕಾರ ಬಹಳ ಅಸಹ್ಯ ಆಗುತ್ತಿತ್ತು. ಅವರು ಹಿಟ್ಲರ್ ಅವರಿಗೂ ಕೂಡ ಒಂದು ಪತ್ರ ಬರೆದಿದ್ದರು.
ನೀವು? ಪ್ರಮಾಣ ವಚನ ಸ್ವೀಕರಿಸಿದ ಮರು ನಿಮಿಷದಲ್ಲೇ, ಸಾವಿರಾರು ಕೋಟಿ ಕರ್ನಾಟಕದ ಹಣವನ್ನು ಜಾತಿ ಮತ್ತು ಕೋಮು ಆಧಾರಿತ ಸಾಲ ಮನ್ನಾಗೆ ಕೊಟ್ಟು ಬಿಟ್ಟರಲ್ಲ..  ಕ್ಯಾಬಿನೆಟ್ ಕೂಡ ಮಾಡುವ ಮುಂಚೆ ಒಬ್ಬರೇ, ಇಷ್ಟೊಂದು ದೊಡ್ಡ ನಿರ್ಣಯ ತೊಗೊಂಡು, ಬೇರೆಯವರನ್ನು ಸರ್ವಾಧಿಕಾರಿ ಅಂತ ಭಾಷಣಗಳಲ್ಲಿ ಜರಿಯುತ್ತೀರಲ್ಲ.. ಅದು ಗಾಂಧಿ ವಾದವಾ?

೯) ಕೊನೆಯದಾಗಿ, ಗಾಂಧೀ ಅವರು ಸ್ತ್ರೀಯರ ಬಗ್ಗೆ ಅತ್ಯಂತ ಗೌರವ ಇಟ್ಟುಕೊಂಡಿದ್ದ ಶ್ರೇಷ್ಠ ಮಾನವ. ಗಾಂಧೀ ಅವರು ನಿತ್ಯ ಪಠಿಸುತ್ತಿದ್ದ "ವೈಷ್ಣವ ಜನತೋ" ಭಜನೆಯಲ್ಲಿ ಹೀಗೆ ಒಂದೆರಡು ಸಾಲುಗಲಿವೆ.

"ವಾಚ, ಕಾಛ್ ಮನ ನಿಶ್ಚಳ ರಾಖೆ" - ಅಂದರೆ, ಮಾತು, ಕೆಲಸ ಮತ್ತು ಯೋಚನೆ ಶುದ್ಧಿಯಾಗಿ ಇಟ್ಟುಕೋ.
"ಪರಸ್ತ್ರೀ ಜೇನೇ ಮಾತ್ ರೇ" - ಅಂದರೆ, ಪರಸ್ತ್ರೀಯನ್ನು ತಾಯಿ ಅಂತೆ ನೋಡು.

ಆದರೆ ನೀವು ಗಾಂಧಿ ಜಯಂತಿ ದಿವಸ ಹಾಕಿಕೊಂಡಿದ್ದ ಟೋಪಿ ನೆಹರು ಅವರದ್ದು. ಗಾಂಧಿ ಆ ಟೋಪಿ ಹಾಕಿದ್ದು ಬಹಳ ಕಡಿಮೆ ಅಥವಾ, ಇಲ್ಲವೇ ಇಲ್ಲ. ಅದೇ ನೆಹರು ಅವರು, ಮದುವೆ ಆಗಿ ಮಗಳಿದ್ದ ಗೃಹಿಣಿ ಎಡ್ವಿನಾ ಮೌಂಟ್ ಬಾಟ್ಟೆನ್ ಜೊತೆ ಹೇಗಿದ್ದರು ಅಂತ ಸ್ವಲ್ಪ ಎಡ್ವಿನಾ ಅವರ ಮಗಳು ಹೇಳಿರುವದನ್ನು ಓದಿ. ನಿಮ್ಮ ಪರಮಾಪ್ತ ಸಿ ಎಂ ಇಬ್ರಾಹಿಂ ಅವರು ಇಂದಿರಾ ಗಾಂಧಿ ಬಗ್ಗೆ ಮಾಡಿರುವ ಭಾಷಣಗಳ ಬಗ್ಗೆ ಸ್ವಲ್ಪ ಗಮನ ಹರಿಸಿ. (ಈಶ್ವರಪ್ಪ ಸಹಾಯ ಮಾಡ ಬಹುದು). ಆಮೇಲೆ ಹೇಳಿ, ನಿಮ್ಮದು ಯಾವ ಸೀಮೆ ಗಾಂಧಿವಾದಾ?

ಮುಕ್ತಾಯ: ಒಂದು ಸಮಾಜ ಅಂದ್ರೆ, ಬೇಕಾದಷ್ಟು ತತ್ತ್ವ ಇಟ್ಟುಕೊಳ್ಳುವ ಜನ ಇರುತ್ತಾರೆ. ಎಲ್ಲಾರೂ ನಿಮ್ಮ ಮೌಲ್ಯಗಳನ್ನೇ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಒಬ್ಬ ಮುಖ್ಯಮಂತ್ರಿ ಆಗಿ, ನೀವು ಎಲ್ಲ ತರಹದ ಜನರನ್ನು ಪ್ರತಿನಿಧಿಸಿ. ನೀವು ಕೇವಲ ಕಾಂಗ್ರೆಸ್ ಪಕ್ಷದವರ ಮುಖ್ಯಮಂತ್ರಿ ಅಲ್ಲ. ನಿಮ್ಮ ಪಕ್ಷದ ಬಹು ದೊಡ್ಡ ನಾಯಕ ನೆಹರು ಅವರು ಕೂಡ ತಮ್ಮ ಕೊನೆಗಾಲದಲ್ಲಿ RSS ವಿರುದ್ಧ ಪರಮದ್ವೇಷವನ್ನು ಬಿಟ್ಟು, ಅವರನ್ನು ೧೯೬೩ ಗಣತಂತ್ರ ದಿನದ ಪೆರೇಡ್ನಲ್ಲಿ ಭಾಗವಹಿಸುವಂತೆ ಆಮಂತ್ರಣ ನೀಡಿದ್ದರು ಅನ್ನೋದನ್ನ ಮರೆಯಬೇಡಿ!

ಕನಿಷ್ಠ ಪಕ್ಷ ನಿಮ್ಮ ೨೦೧೫ ಗಾಂಧಿ ಜಯಂತಿ ನಡವಳಿಕೆ ಮುಖ್ಯಮಂತ್ರಿ ಹುದ್ದೆಗೆ ಘನತೆ ತರುವಂತೆ ಇರತ್ತೆ ಎಂದು ಹಾರೈಸೋಣ.

Images from: coastaldigest, mangaloremath.wordpress, corruptcongress.wikia and oppanna

2 comments:

  1. ಮೂರ್ಖನಿಗೆ ನೂರ್ಕಾಲ ಬುದ್ಧಿಯನು ಹೇಳಿದರೆ, ಗೋರ್ಕಲ್ಲಮೇಲೆ ಮಳೆ ಸುರಿದಂತೆ.
    ನೀರ್ಕೊಂಬುದೇ......

    ReplyDelete